ಮಂಗಳವಾರ, ಸೆಪ್ಟೆಂಬರ್ 9, 2014

ಹಸುಳೆಯ ತೇಜ



ಭಕುತರ ಕಣ್ಮಣಿಯೆ ಭಕುತರ ದಿನಮಣಿಯೆ
ಭಕುತರ ರತುನ ತವನಿಧಿ | ವಿರಕ್ತನೆ
ಭಕುತರ ಮೇರು ಪರ್ವತವೆ |

ಹಸನಾದ ಮೊಗದಲ್ಲಿ ಹೊಸಕಳೆ ಹೊಳಿತೈತಿ
ನಸುನಗೆ ತೆರಿಯ ಹೊಡಿತೈತಿ | ವಿರಕ್ತನ
ಹಸುಳೆಯ ತೇಜ ಮೆರಿತೈತಿ |

ಕೂಸುಹೂಮನಸಿಗೆ ಗಾಸಿಬೀಸಿ ಮಾಡದಲೆ
ಸೂಸು ಗಾಳ್ಯಾಗಿ ಒಳಹೊಕ್ಕು | ವಿರಕ್ತನ
ಭಾಷೆಯ ಬೆಡಗನ್ನರಿಬೇಕೊ |

ಹೊರಗಣ್ಣ ಮುಚ್ಚಿದ್ದು ತೆರೆದಿಟ್ಟು ಒಳಗಣ್ಣು
ಅರಿವಿನ ಗುರುವ ಧೇನಿಸುತ | ವಿರಕ್ತನು
ಪರಮಾರ್ಥದಲ್ಲಿ ನಿಲ್ಲುವನು |

ಪರತತ್ವದ ಗೊಡವಿಲ್ಲ ಪರಿಣತಿ ಪಡೆದಿಲ್ಲ
ತರತರ ಮಾತು ಗೊತ್ತಿಲ್ಲ | ವಿರಕ್ತನಿಗೆ
ಶರಣರ ಬಿಟ್ಟು ಬದುಕಿಲ್ಲ |

ಶರಣರ ನುಡಿಗಳನು ಸ್ಮರಣಿಯ ಮಾಡುತ್ತ
ಕರಣಗಳ ಕಟ್ಟಿ ನಿಲಿಸುತ್ತ | ವಿರಕ್ತನು
ಅರಿವಿನ ಆಳದಿ ಮುಳುಗುವನು |

ಎಲ್ಲರನ ಬಳಿಕರೆದು ಮೆಲ್ಲನೆ ನುಡಿವನು
ಮಲ್ಲಿಗೆ ಪರಿಮಳ ಬೀರುತ | ವಿರಕ್ತನು
ಕಲ್ಲೆದೆ ಕರಗಿಸಿ ಬಿಡುವನು |

ಕರುಳಿನ ಮಾತಿಗೆ ಶರಣೆನದ ಜನರಿಲ್ಲ
ಹರಭಾವ ಸೂಸಿ ಹರಿತೈತಿ | ವಿರಕ್ತನಲಿ
ಸುರಧೇನು ವಾಸ ಹೂಡೈತಿ |

ಮುದ್ದಾಡಿ ಭಕುತರನು. ಗುದ್ದುಗಳ ನೀಡುವನು
ಸದ್ದಿಲ್ಲದೇ ಮನಸ ಗೆಲ್ಲುವನು ! ವಿರಕ್ತನು
ಬುದ್ಧಿಗೆ ಮೀರಿ ನಿಲ್ಲುವನು !

ಗುರುವೆಂದ್ರೆ ಗುರುವಲ್ಲ ಹರನೆಂದ್ರೆ ಹರನಲ್ಲ
ಮರವಾಗಿ ನೆರಳು ನೀಡುವ ! ವಿರಕ್ತನಿಗೆ
ಸರಿಸಾಟಿ ಯಾರೋ ಜಗದಾಗ !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ