ಮಂಗಳವಾರ, ಸೆಪ್ಟೆಂಬರ್ 9, 2014

ಕುಂತನಿಂತ ಜನರೆಲ್


ಕುಂತನಿಂತ ಜನರೆಲ್ಲ ಶಾಂತರಾಗಿ ಕೇಳಿರಿ
ತಾಳಿಕೋಟಿ ವಿರಕ್ತನ ಕತೆಯನ್ನ |
ಖಾಸಗತ ಮಠಕೆ ಕೀರ್ತಿಯ ತಂದ
ನಿಜದ ಗುರುವಿನ ಚರಿತೆಯನ |

ಅನ್ನಪೂರ್ಣಾದೇವಿ ಶಿವಬಸವ ದೇವರ
ಪುಣ್ಯ ಉದರದಿ ಜನಿಸಿದನ |
ಹಾಲ ಮನಸಿನ ಲೋಲ ಶ್ರೀ ಗುರು
ಲೋಕದಿ ಆಡಿದ ಆಟವನ |

ಮುಗ್ಧ ಭಾವದ ತೇಜೋ ಮೂರ್ತಿಯು
ಹಳ್ಳಿ ಹಳ್ಳಿಗೆ ಅಲೆದವನ |
ಶರಣರ ನಡೆನುಡಿ ಅರಿತು ನಡೆಯಲು
ಶುಭಸಂದೇಶವ ಸಾರಿದನ |

ಹೊರಗಣ್ಣು ಮುಚ್ಚಿ ಒಳಗಣ್ಣು ತೆರೆದು
ಭಕುತರ ಮನವನು ಗೆದ್ದವನ |
ಶುದ್ಧಮನಸಿಂದ ಶುಭ ಹಾರೈಸಿ
ಬೆನ್ನಿನೆ ಮ್ಯಾಲೆ ಗುದ್ದಿದವನ |

ಜಾತಿಮತಗಳ ಭೇದವ ಮಾಡದೆ
ನಮ್ಮವನಮ್ಮವರೆಂದವನ |
ಮನಸಿನ ಮೈಲಿಗೆ ತೊಳೆಯುವ ಕಾಯಕ
ಬಿಟ್ಟು ಬಿಡದಲೆ ನಡಿಸಿದನ |

ಜಪತಪ ಮಾಡದೆ ನೆಪವನು ತೋರದೆ
ಸಾತ್ವಿಕ ಬದುಕಲಿ ನಲಿದವನ |
ಮಾತಿನ ಮೋಡಿಗೆ ಸಿಲುಕದ ವಿರಕ್ತನು
ಲಿಂಗದೇವನ ಒಲಿಸಿದನ |

ಯಾವುದೋ ಜನ್ಮದ ಪುಣ್ಯಕೊ ಏನೊ
ನಮ್ಮ ಭಾಗ್ಯಕೆ ದೊರಕಿದನ |
ಅರಿವಿನ ಮುಗ್ಧನು ಕಾಲವ ಗೆದ್ದು
ಬಯಲಿನ ಬಯಲಲಿ ಬೆರೆತವನ|

ಕಡದಳಿ  ಚಂದ್ರಗೌಡ ಅಕ್ಷರ ಜೋಡಿಸಿ
ಚಂದದ ಹಾಡ ಕಟ್ಟ್ಯಾನ |
ಮಾತಿನ ಹೊಲಬಿಗೆ ಬರಹದ ತಲಬಿಗೆ
ಸಿಗಲಾರದಂಥ  ವಿರಕ್ತನ | 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ